Friday, October 2, 2009
ಎಂ.ಜಿ. ನಿನ್ನ ಜನುಮದಿನಕ್ಕೊಂದು ಸಾಲು.
ಬರೆಮೈಲಿದ್ದವ ಈಗ ನಮ್ಮ ದೇಶದ ಎಲ್ಲಾ ನೋಟುಗಳಲ್ಲಿ ರಾರಾಜಿಸುತಿದ್ದಿಯಲ್ಲಾ! ಭಳಾರೆ ಬನಿಯಾ! ಅನ್ನೋಣವೇ? ನಿನ್ನ ಜನುಮದಿನಕ್ಕೊಂದು ಸಲಾಮು. ಇಂದು ರಜೆ - ದೂರದರ್ಶನದಲ್ಲಿ ನಿನ್ನ ಕುರಿತು ಸಿನಿಮಾ ನೋಡಲು. ನಿನ್ನ ಹೆಸರಿರುವ ರಸ್ತೆಯಲ್ಲಿ ಸುತ್ತಿ ಬರಲು. ನೀನು ಮಾತ್ರ ಒಂದು ನಿಂತೇ ಇದ್ದಿಯಲ್ಲಾ ಆ ಮೂಲೆಯಲ್ಲಿ ಪ್ರತಿಮೆಯಾಗಿ. ನಮ್ಮೆಲ್ಲಾ ಗೊಂದಲಗಳನ್ನು ನೋಡುತ್ತಾ.
ಡಿಯರ್ ಎಂ.ಜಿ. ಹ್ಯಾಪಿ ಬಡ್ಡೇ, ಮ್ಯಾನ್!!
Thursday, October 1, 2009
ನಡುವಿನಲ್ಲೊಂದು ಕೊಮಾ
ಸಂಜೆ ಮಾತ್ರ ಕುಡಿಯುತ್ತಿದ್ದ ಆತ ಮಧ್ಯಾಹ್ನ ಕಳ್ಳು ಕುಡಿಯಲು ಆರಂಭಿಸಿದ. ಬೆಳಿಗ್ಗೆ ಹನ್ನೊಂದಕ್ಕೆ ಪದವಿಗೆ ಹೊರಟರೆ ಬಾಬು ಪೂಜಾರಿಯ ಶೇಂದಿ ಅಂಗಡಿಯ ಮೊದಲ ಗಿರಾಕಿಯೇ ಅವನಾಗುತ್ತಿದ್ದ. ಕುಡಿಯುತ್ತಾ ಕುಡಿಯುತ್ತಾ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿತ್ತು. ಕುಡಿದ ಅಮಲಿನಲ್ಲಿ ಎದುರಿಗೆ ಸಿಕ್ಕ ಹುಡುಗರನ್ನಾಗಲಿ, ಹೆಂಗಸರನ್ನಾಗಲಿ ತಡೆದು ನಿಲ್ಲಿಸಿ ಅವರಿಗೆ ಕತೆಹೇಳುತ್ತಿದ್ದ. ಕೆಲವೊಮ್ಮೆ ಹುರುಪಿನಿಂದ ಕೆಲವು ಪೇಟೆ ನೋಡಿದ ಹುಡುಗರು ಆತನಿಗೆ ಪೇಟೆಯ ಸುದ್ದಿಯನ್ನೂ ತಿಳಿಸುತ್ತಿದ್ದರು. ಹುಡುಗರಿಂದ ಕೇಳಿದ ಸುದ್ದಿಯನ್ನೇ ಸಂಜೆ ಎಲ್ಲರಿಗೂ ಕತೆಯಾಗಿ ಹೇಳುತ್ತಿದ್ದ. ಊರಿಗೆ ಬರುವ ಒಂದು ಬಸ್ಸು, ಅದು ಡಾಮರಿಲ್ಲದ ರಸ್ತೆಯಲ್ಲಿ ಚಲಿಸುವಾಗ ಏಳುವ ಧೂಳು, ದಿಕ್ಕು ತಪ್ಪುತ್ತಿರುವ ಊರು, ಎಲ್ಲವೂ ಮತ್ತೆ ಕತೆಯಾಗುತ್ತಿದ್ದವು.
ಆತ ಇದ್ದಕ್ಕಿದ್ದಂತೆ ಕುಡಿಯುವುದನ್ನು ನಿಲ್ಲಿಸಿದ. ಬೆಳಗೆದ್ದು ತೋಟದ ಬಾಳೆಗಿಡಗಳಿಗೆ ನೀರು ಹಾಕುತ್ತಿದ್ದ. ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದ್ದಾಗ ಅದರ ಹೂಳೆತ್ತುತ್ತಿದ್ದ. ಸಂಜೆಯಾದಂತೆ ಬೆಳೆದ ಬಾಳೆಗೊನೆಗಳನ್ನು ಪೇಟೆಗೆ ಹೋಗಿ ಮಾರುತ್ತಿದ್ದ. ಜತೆಗೆ ಆತ ಬಡಗಿಯ ಕೆಲಸವನ್ನು ಮಾಡಲು ತೊಡಗಿದ. ಹಿಂದೆ ಎಂದೋ ಕಲಿತಿದ್ದೆ ಎಂದು ಕೇಳಿದವರಿಗೆ ಹೇಳುತ್ತಿದ್ದ. ಅಲ್ಲಿ ಇಲ್ಲಿ ಬಿದ್ದಿದ್ದ ಮರದ ತುಂಡುಗಳು ಒಂದೆಡೆ ಸೇರಿದವು. ಭಟ್ಟರು ತೋಟದಲ್ಲಿ ಕಡಿಸಿ ಹಾಕಿದ್ದ ಮಾವಿನ ಮತ್ತು ಹಲಸಿನ ಮರಗಳನ್ನು ಗರಗಸದಲ್ಲಿ ಸಿಗಿಸಿದ. ಹಲಗೆಗಳು ರೀಪುಗಳು, ಅಡ್ಡಗಳು ತಯಾರಾದವು. ಕೆಲಸ ಭರದಿಂದ ಸಾಗುತಿತ್ತು. ನೋಡುನೋಡುತ್ತಿದ್ದಂತೆ ಮನೆಯಲ್ಲಿ ಮರದ ಕುರ್ಚಿಗಳು, ಮೇಜು, ಮಂಚ, ಬೆಂಚು, ಮಣೆ ಎಲ್ಲವೂ ತಯಾರಾದವು. ಈ ಮಧ್ಯೆ ಆತ ಕುಡಿಯುತ್ತಿರಲಿಲ್ಲ. ಆದರೆ ಸಂಜೆಯಾದಂತೆ ಯಾರಾದರೂ ಇವನನ್ನು ಕಾಣಲು ಬಂದರೆ ಕತೆ ಮಾತ್ರ ಅದೇ ಸೊಬಗಿನಲ್ಲಿ ಹೇಳುತ್ತಿದ್ದ.
ಮತ್ತೆ ಒಂದು ಸಂಜೆ ಹುಡುಗನನ್ನು ಕರೆದ. ನಾಗೂನ ಗಡಂಗಿಗೆ ಹೋಗಿ ಒಂದು ಕ್ವಾರ್ಟರ್ ಶರಾಬು ತಾ ಎಂದ. ಮತ್ತೆ ಕುಡಿಯಲು ತೊಡಗಿದ. ಮತ್ತೆ ಶುರುಮಾಡಿದೆಯಾ ಎಂದು ಕೇಳಿದವರಿಗೆ ನಾನೇನೂ ಶರಾಬಿನ ದಾಸನಲ್ಲ. ನನ್ನದು ಚಟವಲ್ಲ. ಅದೇನೋ ಆನಂದಕ್ಕೆ ಕುಡಿಯುತ್ತೇನೆ. ಬೇಡವೆಂದಾಗ ಬಿಡುತ್ತೇನೆ ಎಂಬ ಧೈರ್ಯ ನನಗಿದೆ, ಎಂದ. ನಾನು ಕುಡಿಯುವುದರಿಂದ ನಿಮಗೇನು ತೊಂದರೆಯಿಲ್ವಲ್ಲ ಎಂದ.
ಮತ್ತೆ ಬ್ಲಾಗ್ ಬರೆಯಲು ತೊಡಗಬೇಕು ಎಂದು ನನಗನಿಸಿದಾಗ ಅವನ ನೆನಪಾಯಿತು. ಅವನಂದಂತೆ ಬ್ಲಾಗ್ ಬರೆಯುವುದು ನನ್ನ ಚಟವಲ್ಲ. ಅದೇನೋ ಆನಂದಕ್ಕೆ ಬರೆಯುತ್ತೇನೆ. ಬೇಡವೆಂದಾಗ ಬಿಡುತ್ತೇನೆ ಎಂಬ ಧೈರ್ಯ ನನಗಿದೆ. ನಾನು ಬರೆಯುವುದರಿಂದ ನಿಮಗೇನು ತೊಂದರೆಯಿಲ್ವಲ್ಲ!
ಒಲವಿನಿಂದ
ಬಾನಾಡಿ
Monday, April 27, 2009
ಬುದ್ಧನ ನೆನಪುಗಳು

ತನ್ಮಯ ಬರುತ್ತಾನೆ ಎಂದು ನಮ್ಮ ಮನೆಮಂದಿಗೆಲ್ಲಾ ಸಂಭ್ರಮ. ತನ್ಮಯ ನಮ್ಮ ನೆರೆಮನೆಯ ಹುಡುಗ. ಆತನಿಗೆ ಎರಡು ವರ್ಷವಿದ್ದಾಗ ಆತನ ತಂದೆಗೆ ಗುಜರಾತಿಗೆ ಕೆಲಸದ ವರ್ಗವಾಗಿ ಈಗ ನಾಲ್ಕು ವರ್ಷವಾಯಿತು. ಮತ್ತೆ ಅವರು ನಮ್ಮ ಊರಿಗೆ ಬರುತ್ತಾರೆ. ಆತನಿಗೆ ಈಗ ಆರು ವರ್ಷ. ತನ್ಮಯನ ಅಪ್ಪ ನನಗೆ ಫೋನ್ ಮಾಡಿ ತನ್ಮಯನಿಗೆ ಶಾಲೆಯೊಂದನ್ನು ಹುಡುಕಿ ಇಡಲು ಹೇಳಿದ್ದಾನೆ. ನಮ್ಮ ಹತ್ತಿರದ ನಾಲ್ಕಾರು ಶಾಲೆಗಳ ದರ್ಶನ ಮಾಡಿ ಬಂದಿದ್ದೇನೆ. ಎಲ್ಲೂ ಪ್ರವೇಶವಿಲ್ಲ. ಒಂದೆರಡು ಶಾಲೆಯವರು ಅವರ ಎಪ್ಪತ್ತು ಕಿಲೋಮೀಟರ್ ದೂರದ ಶಾಖೆಯೊಂದರಲ್ಲಿ ಪ್ರವೇಶ ದೊರೆಯುವ ಸಾಧ್ಯತೆ ಇದೆ ಎಂದಿದ್ದಾರೆ. ತನ್ಮಯ ನಮಗೆಲ್ಲಾ ಅಚ್ಚುಮೆಚ್ಚು. ಹಾಗಾಗಿ ಅವನಿಗಾಗಿ ನಾವೇನೂ ಬೇಕಾದರೂ ಮಾಡಬಲ್ಲೆವು. ಶಾಲೆಯ ಪ್ರವೇಶಕ್ಕಾಗಿ ಬಹಳಷ್ಟು ಮಂದಿಯೊಡನೆ ಮಾತಾಡಿ ಇಟ್ಟಿದ್ದೇವೆ. ಆತ ಇಲ್ಲಿಗೆ ಬರುತ್ತಲೇ ಆತನ ಹುಟ್ಟಿದ ಹಬ್ಬ. ಹೌದು ನಮಗಿನ್ನೂ ನೆನಪಲ್ಲಿದೆ. ಆತನ ಅಮ್ಮ ಸ್ಮ್ರಿತಾ ಸಿಸೇರಿಯನ್ ಹೆರಿಗೆಯಾಗಲು ಇನ್ನೊಂದು ಮೂರು ದಿನಗಳಲ್ಲಿ ಯಾವಾಗ ಆಗಬಹುದೆಂದು ಕೇಳಿದಾಗ, ಒಳ್ಳೆಯದಿನವೆಂದು ಬುದ್ಧ ಪೂರ್ಣಿಮೆಯ ದಿನವನ್ನು ಆಯ್ಕೆ ಮಾಡಿದ್ದಳು. ಬರುವ ಬುದ್ಧ ಪೂರ್ಣಿಮೆಗೆ ತನ್ಮಯ ಬಂದೇ ಬರುತ್ತಾನೆ ನಮ್ಮ ನೆರೆಮನೆಗೆ. ಅವನ ಹುಟ್ಟಿದ ಹಬ್ಬ ನಮಗೂ ಗಮ್ಮತ್ತು.
ಏಪ್ರಿಲ್ ಆರಂಭದಲ್ಲಿ ನಾನು ಒರಿಸ್ಸಾದ ಕರಾವಳಿಯಲ್ಲಿದ್ದೆ. ಸುಡು ಬಿಸಿಲು ಆಗಷ್ಟೇ ಆರಂಭವಾಗಿತ್ತು. ಸಮುದ್ರ ಶಾಂತವಾಗಿತ್ತು. ನಿರಂತರ ರೌದ್ರ ರೂಪ ತಾಳುವ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸದಾ ಕಾಡುತ್ತಿರುತ್ತದೆ. ನಾವು ಹಿಂತಿರುಗಿದ ಕೆಲವು ದಿನಗಳಲ್ಲಿ ಬಿಜ್ಲಿ ಎಂಬ ಚಂಡಮಾರುತ ಬಂದು ಅಪ್ಪಲಿಸದೆ ಹೋಯಿತು. ಒರಿಸ್ಸಾದ ಕರಾವಳಿ ಮತ್ತು ಸಣ್ಣ ಪಟ್ಟಣ, ಹಳ್ಳಿಗಳನ್ನು ಸುತ್ತುತ್ತಿರುವಂತೆ ಅದು ಕಳಿಂಗರಾಜ್ಯ ಎಂದು ನನಗೆ ನೆನಪಾಯಿತು.
ಕ್ರಿಸ್ತ ಪೂರ್ವದಿಂದಲೇ ಕಳಿಂಗರಾಜ್ಯ ಒಂದು ಸ್ವತಂತ್ರ ದೇಶವಾಗಿತ್ತು. ಬುಡಕಟ್ಟು ವಂಶಸ್ತರು ರಾಜ್ಯವಾಳುತ್ತಿದ್ದರು. ವೇದಕಾಲದಲ್ಲೂ ಈ ರಾಜ್ಯ ಇತರ ದೇಶಗಳಂತೆ ವೇದಕಾಲದ ರಾಜರಿಗಿಂತ ಹೊರಗಿತ್ತು. ಹದಿನೈದನೆ ಶತಮಾನದ ವರೆಗೆ ಇಲ್ಲಿ ಬ್ರಾಹ್ಮಣರ ಪ್ರಭಾವ ಕಡಿಮೆಯಿತ್ತು. ಆಡಳಿತ ಮತ್ತು ಯುದ್ಧದಲ್ಲಿ ಅಲ್ಲದೆ ಕಲೆ ಮತ್ತು ಸಂಸ್ಕೃತಿಯಲ್ಲಿಯೂ ಈ ದೇಶ ಉತ್ತುಂಗದಲ್ಲಿತ್ತು. ಕ್ರಿಸ್ತ ಪೂರ್ವ ೨೧೦ ರ ಸುಮಾರಿಗೆ ಚಂದ್ರಗುಪ್ತ ಮೌರ್ಯನ ಮೊಮ್ಮಗ ಸಾಮ್ರಾಟ ಅಶೋಕನು ಕಳಿಂಗ ರಾಜ್ಯವನ್ನು ಕಬಳಿಸಲು ದಂಡೆತ್ತಿಕೊಂಡು ಬಂದನು. ಪರಾಕ್ರಮಿಗಳಾದ ಕಳಿಂಗದ ಸೈನಿಕರು ಸಾಮ್ರಾಟ ಅಶೋಕನ ಸೈನ್ಯವನ್ನು ಕೆಚ್ಚೆದೆಯಿಂದ ಎದುರಿಸಿದರು. ಆ ಯುದ್ಧ ಆ ಕಾಲದ ಅತ್ಯಂತ ಕರಾಳವಾದ ಯುದ್ಧವಾಗಿತ್ತು. ರಕ್ತದೋಕುಳಿಯಾದ ರಣರಂಗ ಭೀಭತ್ಸವಾಗಿತ್ತು. ಜಗತ್ತನ್ನೇ ಯುದ್ಧದಿಂದ ಗೆಲ್ಲಲು ಹೊರಟ ಸಾಮ್ರಾಟ್ ಅಶೋಕನ ಎದೆಯನ್ನೆ ಕರಗಿಸಿತು. ಅಹಿಂಸಯನ್ನೇ ಧರ್ಮವೆಂದು ಭೋದಿಸಿದ ಬುದ್ಧನ ಅನುಯಾಯಿಯಾಗಿ ಸಾಮ್ರಾಟ ಅಶೋಕನು ಉಳಿದ ಬದುಕನ್ನು ಕಳೆದನು. ಭುವನೇಶ್ವರದ ಬಳಿಯಲ್ಲಿರುವ ದೌಳಿ ಎಂಬಲ್ಲಿ ಅಶೋಕನ ಶಿಲಾಶಾಸನವಿದೆ. ೧೮೩೭ ರಲ್ಲಿ ಲೆ. ಕಿಟ್ಟೋ ಕಂ
ಡುಹಿಡಿದ ಈ ಶಾಸನದಲ್ಲಿ ಕಳಿಂಗ ಯುದ್ಧದ ನಂತರ ಅಶೋಕನು ಕಳಿಂಗರಾಜ್ಯದ ಜನತೆಗೆ ಅಹಿಂಸೆಯ ಮತ್ತು ಭರವಸೆಯ ಮಾತುಗಳನ್ನು ಬರೆಸಿದ್ದಾನೆ. ಮಹಾರಾಜನ ಪಾಕಶಾಲೆಯಲ್ಲಿ ಮಾಂಸದಡುಗೆಯ ನಿರ್ಬಂಧ, ವೈದ್ಯಕೀಯ ಶುಶ್ರೂಸೆಗಾಗಿ ವ್ಯವಸ್ಥೆ, ರಾಜ್ಯದ ಜನತೆಗೆ ನೈತಿಕ ಧರ್ಮದ ಭೋಧನೆ ಇತ್ಯಾದಿಗಳನ್ನು ಪಾಲಿ ಭಾಷೆಯಲ್ಲಿ ಬರೆಸಲಾದ ಈ ಶಿಲಾಶಾಸನದಲ್ಲಿ ಕಾಣಬಹುದು. ಈ ಶಿಲಾಶಾಸನಗ ಬಂಡೆಯ ಮೇಲ್ಗಡೆ ಆನೆಯ ಕೆತ್ತಲಾಗಿದೆ. ಬುದ್ಧನು ಗಜೋತ್ತಮನಾಗಿ ತನ್ನ ತಾಯಿಯ ಗರ್ಭ ಸೇರಿದುದನ್ನು ಈ ಶಿಲ್ಪವು ಸಾರುತ್ತದೆ.
ಅಶೋಕನು ತನ್ನ ಮಗ ಮಹಿಂದನ ಮೂಲಕ ಬುದ್ಧ ಧರ್ಮವನ್ನು ಶ್ರೀಲಂಕಾಗೆ ಕಳುಹಿಸಿದನು. ಇಂದು ಶ್ರೀಲಂಕಾದ 70ಶೇಕಡಾ ಜನಸಂಖ್ಯೆ ಬೌದ್ಧಧರ್ಮದ ಅನುಯಾಯಿಗಳು. ಲಂಕೆ ಮತ್ತೆ ಉರಿಯುತ್ತಿದೆ. ಅಲ್ಲಿನ ಜನಸಾಮಾನ್ಯರು ದಿಕ್ಕೆಟ್ಟಿದ್ದಾರೆ. ಬುದ್ಧ ಮತ್ತೆ ಮತ್ತೆ ನೆನಪಾಗುತ್ತಾನೆ.
ಒಲವಿನಿಂದ
ಬಾನಾಡಿ
©Both Photo by Author
Monday, March 30, 2009
ಕಡಲು, ಕಡಲ ತಡಿ ಮತ್ತು ತಲ್ಲಣಗಳ ಸಂಕಲನ
ಆರಂಭ
ಈ ಪುಸ್ತಕದ ಬಹುತೇಕ ಬರಹಗಾರರ ವಯಸ್ಸು ನಲ್ವತ್ತು ದಾಟಿದೆ. ಅಂದರೆ ಅವರು ಅಷ್ಟು ವರ್ಷಗಳಿಂದ ಮಂಗಳೂರು ಸಂಸ್ಕೃತಿಯ ಭಾಗವಾಗಿ ಅದರ ಕುರಿತು ಸ್ಪಷ್ಟವಾಗಿ ಬರೆಯುವಂತಹ ಅನುಭವವನ್ನು ಪಡೆದಿದ್ದಾರೆ. ಹಾಗಾಗಿ ಇಲ್ಲಿರುವ ಬರಹಗಳೆಲ್ಲಾ ಪ್ರೌಢ ಬರಹಗಳಾಗಿವೆ. ಮತ್ತು ಇನ್ನೂ ಮೂವತ್ತು ದಾಟದ ಹೊಸ ತಲೆಮಾರಿನ ಮಂಗಳೂರು ಜನರಿಗೆ ಇಲ್ಲಿನ ಅನನ್ಯ ಸಂಸ್ಕೃತಿಯ ಪರಿಚಯ ನೀಡುವಲ್ಲಿ ಈ ಪುಸ್ತಕ ದಾರಿದೀಪವಾಗಬಹುದು.
ತಲ್ಲಣ
ಮಂಗಳೂರಿನ ತಲ್ಲಣವನ್ನು ಪ್ರತಿಬಿಂಬಿಸುವಂತೆ ಭಾಸ್ಕರ ಹೆಗ್ಡೆಯವರು ಬರೆಯುತ್ತಾರೆ ಮಂಗಳೂರಿನಲ್ಲಿ ಒಂದು ವ್ಯಾನ್ನಲ್ಲಿ ತುಂಬಿರುವ ಆಕಳುಗಳನ್ನು ಹಿಡಿದರೆ ಸಾಕು. ಹಿಂಸಾಚಾರ ಗ್ಯಾರಂಟಿ. ಈಗ ಲೇಟೆಸ್ಟು - ಬೇರೆ ಬೇರೆ ಸಮಾಜದ ಹುಡುಗ ಹುಡುಗಿ ಓಡಾಡಿದರೆ ಸಾಕು, ನಾಯಿ ನರಿಗೆ ಹೊಡೆದಂತೆ ಹೊಡೆಯುವುದು ಸಮಾಜದ ರೀತಿ ರಿವಾಜ್ ಆಗಿ ರೂಪುಗೊಂಡಿತು.
ಇಂತಹ ಸಮಾಜದಲ್ಲಿ ಭೀತಿ ಎಲ್ಲರನ್ನೂ ಕಾಡುತ್ತದೆ. ಗುಲಾಬಿ ಬಿಳಿಮಲೆಯವರು ತಮ್ಮ ಭೀತಿಯನ್ನು ವ್ಯಕ್ತಪಡಿಸುತ್ತಾ ತಿಳಿಸುತ್ತಾರೆ: ಮತೀಯ ಸಾಮರಸ್ಯದ ಅಪೂರ್ವ ಮಾದರಿಯಂತಿದ್ದ ಇಲ್ಲಿನ ಸಮಾಜ ಮತಧರ್ಮದ ನೆಲೆಯಲ್ಲಿ ಹೇಗೆ ಛಿದ್ರವಾಗುತ್ತಿದೆ, ತಾಲಿಬಾನಿ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಮಂದಿಯ ಉಪಟಳದಿಂದಾಗಿ ಮಗ್ದ ಮನಸಿನ ಯುವಕ ಯುವತಿಯರು ಎಂತಹ ಭಯದ ಬದುಕನ್ನು ಬದುಕುತ್ತಿದ್ದಾರೆ!
ವೈಯಕ್ತಿಕ ಕಾರಣಗಳು ಕೋಮುದಳ್ಳುರಿಗೆ ಕಾರಣವಾಗುತ್ತವೆ. ಮೀನು ವ್ಯಾಪಾರದ ಜಗಳದೊಂದಿಗೆ ಕೇವಲ ವ್ಯಾಪಾರಿ ಹಿತಾಸಕ್ತಿಯ ಕಾರಣದಿಂದ ಪ್ರಾರಂಭವಾದ ಹಿಂದೂ ಮುಸ್ಲಿಮ್ ಸಂಘರ್ಷ ನಂತರದ ದಿನಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯಿತು ಎಂದು ಶಶಿಧರ್ ಭಟ್ ವಿವರಿಸುತ್ತಾರೆ.
ಸಾಂಸ್ಕೃತಿಕ ಫ್ಯಾಸಿಸಂ ಪ್ರತಿಪಾದಕರು ಸಮುದಾಯದಲ್ಲಿ ಆಳವಾದ ಕಂದಕ ನಿರ್ಮಾಣವನ್ನು ಬಯಸುತ್ತಾರೆ ಎಂದು ಹೇಳುವ ಮುಜಾಫರ್ ಅಸ್ಸದಿ ಅವರು ಅದಕ್ಕಾಗಿ ನಿರಂತರ ಕೋಮುವಾದ ಹಾಗೂ ಕೋಮು ಘರ್ಷಣೆಯನ್ನು ಬಯಸುವುದು ಸ್ವಾಭಾವಿಕವಾಗುತ್ತದೆ. ಸಮನ್ವಯ ಸಂಸ್ಕೃತಿ ಪ್ರತೀಕವಾಗಿದ್ದ ಬಪ್ಪಬ್ಯಾರಿ ಕಳೆದ ವರ್ಷ ಕೋಮುವಾದ ರಾಜಕಾರಣದ ಭಾಗವಾಗಿದ್ದನ್ನು ಇಲ್ಲಿ ದಾಖಲಿಸಬೇಕು. ಇವತ್ತು ಕರಾವಳಿಯಲ್ಲಿ ಕೋಮು ಘರ್ಷಣೆಯೆಂಬುದು ದಿನ ನಿತ್ಯದ ಘಟನೆ. ಕ್ಷುಲ್ಲಕ ಕಾರಣಗಳು ಕೋಮುವಾದದಲ್ಲಿ ಪರ್ಯವಶನಗೊಳ್ಳುವುದು ವಾಸ್ತವವಾಗುತ್ತಿದೆ.
ಪಬ್ ಸಂಸ್ಕೃತಿ ನಮ್ಮ ಸಂಸ್ಕೃತಿ ಅಲ್ಲ. ಅದು ವಿದೇಶಿ ಸಂಸ್ಕೃತಿ ಎನ್ನುವವರಿಗೆ ಹಿರಿಯ ಕವಿ, ಅಂಕಣಕಾರ ಕೆ. ವಿ. ತಿರುಮಲೇಶ್ ತಿರುಗೇಟು ಹಾಕುತ್ತಾರೆ. ಭಾರತದ ಪುರಾತನ ಶಿಲ್ಪಗಳನ್ನಾಗಲೀ ಚಿತ್ರಗಳನ್ನಾಗಲೀ ಗಮನಿಸಿದರೆ ರವಿಕೆಯನ್ನು ಧರಿಸಿದ್ದನ್ನು ಕಾಣಲಾರೆವು. ಯಾವ ಕಾವ್ಯದಲ್ಲೂ ರವಿಕೆಯ ಪ್ರಸ್ತಾಪ ಬರುವುದಿಲ್ಲ, ಮಾನ ಮುಚ್ಚುವ ವಡ್ಯಾಣಗಳು ಕಾಣಿಸುತ್ತವೆ. ಇಂದು ನಾವು ಉಪಯೋಗಿಸುವ ಯಾವುದೇ ಒಳ ಉಡುಪು ವಿದೇಶಿ ಮೂಲದ್ದು ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ಸಂಸ್ಕೃತಿ ಎಂದು ಬೊಬ್ಬಿರಿಯುವ ಹಿಂದೂ ಸನಾತನಿಗಳು ನಮ್ಮ ಸ್ತ್ರೀಯರು ಈ ವಿದೇಶಿ ಆಚರಣೆಗಳನ್ನೆಲ್ಲಾ ಕಿತ್ತೊಸೆದು ನಾರುಡುಗೆ ಧರಿಸಿ ಮನೆಯೊಳಗೆ ಕುಳಿತಿರಬೇಕೆಂದೇ? ಕೇಳುತ್ತಾರೆ ತಿರುಮಲೇಶ್.
ಮಂಗಳೂರಿನಲ್ಲಿ ನಡೆದ ಘಟನೆಗಳು ಸಾಮಾನ್ಯವಾದವು ಆದರೆ ಅದಕ್ಕೆ ಮಾಧ್ಯಮಗಳು ಬಣ್ಣ ಕೊಟ್ಟಿವೆ ಎಂಬ ವಿಚಾರದ ಹಿನ್ನಲೆಯಲ್ಲಿ ಜಿ.ಎನ್. ಮೋಹನ್ ಅವರ ಬರಹದ ಮಾತು ಪದೇ ಪದೇ ಹೊತ್ತಿ ಉರಿಯುವ ಕರಾವಳಿಯಲ್ಲಿ ಮಾಧ್ಯಮಗಳ ಕೈ ರಕ್ತ ಮೆತ್ತಿಕೊಂಡಿದೆ. ಜನರನ್ನು ತಿದ್ದುವ, ಬದಲಿಸುವ ದಾರಿಗೆ ಹಚ್ಚುವ ಯೋಚನೆಯೇ ಇಲ್ಲದ ಮಾಧ್ಯಮ ಎಂಬ ಉದ್ಯಮ ಈ ಬೆಂಕಿಯಲ್ಲಿ ಮೈ ಕಾಯಿಸಿಕೊಂಡದ್ದೂ ಅಲ್ಲದೆ ತಮ್ಮ ಲಾಭದ ಅಂಕೆಗಳನ್ನು ಕಾಯಿಸಿಕೊಂಡಿದೆ ಎನ್ನುವುದು ನಿಜವೆನಿಸುತ್ತದೆ.
ಜಿಲ್ಲೆಯ ಅರಾಜಕತೆಗೆ ಇಲ್ಲಿನ ರಾಜಕಾರಣಿಗಳ ಹೊಣೆಗೇಡಿತನವನ್ನು ಜವಾಬ್ದಾರಿಯಾಗಿಸುವ ಅಂಕಣಕಾರ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಲೇಖನದಲ್ಲಿ ಅಚ್ಚುಕಟ್ಟಾಗಿ ಅದನ್ನು ನಿರೂಪಿಸುತ್ತಾರೆ. ಅವರು ಹೇಳುತ್ತಾರೆ: ಅರಸು ಅವರ ಅವಸರದ ರಾಜಕೀಯ ಕ್ರಾಂತಿಯಿಂದಾಗಿ ಜಿಲ್ಲೆಯಲ್ಲಿ ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿ ಎಂಬ ಇಬ್ಬರು ನಾಯಕರು ಹುಟ್ಟಿಕೊಂಡರು. ಕೆಲಕಾಲದ ನಂತರ ಟಿ.ಎ.ಪೈ ಅವರನ್ನು ಸೋಲಿಸಿ ಆಸ್ಕರ್ ಫರ್ನಾಂಡಿಸ್ ಪ್ರವೇಶ ಮಾಡಿದರು. .. .. .. ಇಂದು ರಾಜಕೀಯ ವ್ಯವಸ್ಥೆಯೇ ಕುಸಿದು ಬಿದ್ದಂತಹ ಅರಾಜಕತೆಯೊಂದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಿರ್ಮಿತವಾಗಿದ್ದರೆ ಅದಕ್ಕೆ ಈ ತ್ರಿಮೂರ್ತಿಗಳು ಕೂಡಾ ಹೊಣೆಗಾರರು. ಇವರಿಂದ ಹೊಸ ಸೃಷ್ಟಿ, ಪಾಲನೆ ಇಲ್ಲ.
ಹೀಗೆ ಕಡಲತಡಿಯ ತಲ್ಲಣಗಳ ಚಿತ್ರಗಳನ್ನು ನೀಡುವ ಪತ್ರಿಕೆಗಳಿಗಾಗಿ ಬರೆದ ಬರಹಗಳು ಇಲ್ಲಿವೆ.
ಕಡಲ ತಡಿ
ಮರಿಯಪ್ಪ ಭಟ್ಟರು ಇಲ್ಲಿ ಅನೇಕರಿಗೆ ಆರು ಭಾಷೆಗಳಲ್ಲಿ ಮಾತನಾಡುವ ಸಾಮಾರ್ಥ್ಯವಿರುತ್ತದೆ. ಕನ್ನಡ, ತುಳು, ಮಲಯಾಳ, ಕೊಂಕಣಿ, ಹಿಂದೂಸ್ಥಾನಿ ಮತ್ತು ಇಂಗ್ಲಿಷ್. ಹೀಗೆ ದಕ್ಷಿಣಕನ್ನಡ ಭಾಷೆಗಳ ಆಡುಂಬೊಲ ಆಗಿದೆ.
ಮಾನಿಗ, ಕಲ್ಲುರ್ಟಿ, ಮಾಯಾಂದಾಲ್, ನಾಗಸಿರಿ ಪಾಡ್ದನಗಳು ಸ್ತ್ರೀ ಕೇಂದ್ರಿತವಾದ ಮಾತೃರೂಪಿ ಸಂಸ್ಕೃತಿಯೊಂದರ ಹೆಣ್ಣುತನದ ಅಸ್ತಿತ್ವ ಹಾಗೂ ಪ್ರಾಧಾನ್ಯವನ್ನು ವಿವಿಧ ನೆಲೆಗಳಲ್ಲಿ ದಾಖಲಿಸಿದ ಚಿತ್ರಣವನ್ನು ಗಹನವಾದ ಲೇಖನದಲ್ಲಿ ಡಾ. ಗಾಯತ್ರಿ ನಾವಡ ಅವರು ವಿವರಿಸುತ್ತಾರೆ.
ಎಸ್. ಡಿ. ಶೆಟ್ಟಿ ಅವರ ಲೇಖನವು ತುಳುನಾಡಿನ ಶಿಷ್ಟ ಮತ್ತು ಜಾನಪದ ಸಂಸ್ಕೃತಿಗಳ ಮೌಲ್ಯಗಳನ್ನು ವಿವೇಚಿಸುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಸಹಿಷ್ಣುತೆ ಮತ್ತು ಐಕ್ಯತೆಯ ತಳಹದಿಯಲ್ಲಿ ತುಳುನಾಡಿನ ಸಂಸ್ಕೃತಿ ಸುಂದರವಾಗಿ ರೂಪಿತವಾಗಿದೆ.
ಗೇಣಿದಾರರ ಏಣಿಯಾಟ ಲೇಖನದಲ್ಲಿ ಡಾ. ಎಚ್. ನಾಗವೇಣಿ ಅವರು ದಕ್ಷಿಣ ಕನ್ನಡದ ಸಾಮಾಜಿಕ ಪರಿವರ್ತನೆಯ ವಿವರವು ದೊರೆಯುತ್ತದೆ.
ಕಡಲು
ಅಡಿಗರ ಕವನಗಳ ತುಣುಕುಗಳು, ಕಯ್ಯಾರ ಕಿಂಞಣ್ಣ ರೈ, ಎಂ. ವ್ಯಾಸ, ಸೇಡಿಯಾಪು ಕೃಷ್ಣ ಭಟ್, ಬಿ.ಎಂ. ಬಶೀರ್, ಆರ್ ಕೆ ಮಣಿಪಾಲ, ಶ್ರೀನಿವಾಸ ಕಾರ್ಕಳ, ಸುದೇಶ್ ಮಹಾನ್ ಮೊದಲಾದ ಕವಿಗಳ ಕಡಲಿಗಿಂತಲೂ ವಿಸ್ತಾರವಾದ ಭಾವನೆಗಳನ್ನು ನೀಡುವ ಕವಿತೆಗಳು ಈ ಸಂಕಲನದಲ್ಲಿವೆ.
Sunday, March 29, 2009
ದೆಹಲಿಯಲ್ಲಿ ....ಕಡಲ ತಡಿಯ ತಲ್ಲಣ
Thursday, March 26, 2009
ನಾಲ್ಕನೆ ಸ್ಥಂಭ
ಚುನಾವಣೆ ಘೋಷಣೆಗೆ ನಮ್ಮ ವಾಣಿಜ್ಯೀಕೃತ ಮಾಧ್ಯಮಗಳು ಹಾತೊರೆದು ಕಾದಿದ್ದವು. ಚುನಾವಣೆಯ ಕೆಲ ತಿಂಗಳ ಮೊದಲಿಂದ ಆರಂಭವಾದ ಸರಕಾರಿ ಜಾಹೀರಾತುಗಳು ಆರ್ಥಿಕ ವ್ಯವಸ್ಥೆ ಕುಸಿದು ಮಾಧ್ಯಮ ಸಂಸ್ಥೆಗಳು ಅನುಭವಿಸುತ್ತಿದ್ದ ನಷ್ಟವನ್ನು ನೀಗಲು ಸಹಾಯವಾಯಿತು. ವೃತ್ತಪತ್ರಿಕೆಗಳಲ್ಲಿ ಇಡೀಪುಟಗಳ ಜಾಹೀರಾತುಗಳು ತುಂಬಿ ತುಳುಕಾಡಿದವು. ಇಲೆಕ್ಟ್ರಾನಿಕ್ ಮಾಧ್ಯಮಗಳು ಮುಖ್ಯವಾಗಿ ರೇಡಿಯೋ, ಟಿವಿ ಮತ್ತು ವೆಬ್ಸೈಟ್ಗಳು ಕೂಡ ಈ ಸಲದ ಚುನಾವಣೆಯಲ್ಲಿ ಬಹಳಷ್ಟು ಹಣಮಾಡಿದವು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರ ವೆಬ್ಸೈಟ್ನ ಜಾಹಿರಾತು ಲಿಂಕ್ಗಳು ಎರಡು ಸಾವಿರಕ್ಕೂ ಹೆಚ್ಚು ವೆಬ್ಸೈಟ್ಗಳಲ್ಲಿ ಜಾಹಿರಾತು ನೀಡಿದೆ.
ಚುನಾವಣೆ ಆರಂಭವಾದಂತೆ ಮಾಧ್ಯಮಗಳಲ್ಲಿ ವರದಿಗಾರಿಕೆಯ ವಿಶ್ಲೇಷಣೆ ನಡೆಸಿದರೆ ಈಗಾಗಲೇ ಸ್ಥಾಪಿತವಾದಂತೆ ಬೆರಳೆಣಿಕೆಯ ಕೆಲವೊಂದು ಪತ್ರಿಕೆಗಳನ್ನು ಬಿಟ್ಟರೆ ಉಳಿದವೆಲ್ಲಾ ತಾವು ಬೆಂಬಲಿಸುವ ರಾಜಕೀಯ ಧೋರಣೆಗಳನ್ನು ಓದುಗರ ಮೇಲೆ ಹೇರುವ ಕೆಲಸವನ್ನು ನಾಚಿಕೆಯಿಲ್ಲದೆ ಮಾಡುತ್ತಿವೆ. ಸಮಾಜದ ನಾಲ್ಕನೆ ಸ್ಥಂಭದ ಜವಾಬ್ದಾರಿಯನ್ನು ಹೊತ್ತ ಮಾಧ್ಯಮಗಳು ಏನು ಮಾಡುತ್ತಿವೆ ಎಂದು ಆತ್ಮವಿಮರ್ಶೆಮಾಡಿಕೊಳ್ಳುವ ಅವಶ್ಯಕತೆಯನ್ನು ಅವರಾಗಿ ಮಾಡುವುದಿಲ್ಲ. ಇತರ ವೇದಿಕೆಯಲ್ಲಿ ಅಂತಹ ಕೆಲಸ ನಡೆದರೆ ಅದು ಸುದ್ದಿಯಾಗುವುದಿಲ್ಲ. ಇದೊಂದು ವ್ಯತಿರಿಕ್ತವಾದ ಆಭಾಸ.
ಇದರ ನಡುವೆ ನನ್ನ ಪರಿವೀಕ್ಷಣೆಯಲ್ಲಿ ಕಂಡ ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ನಾಲ್ಕನೆ ಸ್ಥಂಭ ಎನ್ನುವ ಮಾಧ್ಯಮಕ್ಕಿಂತ ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾದುದು ಭಾರತದ ರಾಜಕಾರಣ. ನಾವು ನಮ್ಮ ರಾಜಕಾರಣಿಗಳ ಬಗ್ಗೆ ಎಷ್ಟೇ ನಕರಾತ್ಮಕ ಭಾವನೆಯನ್ನೇ ಇಟ್ಟುಕೊಂಡರೂ ಕಟ್ಟಕಡೆಗೂ ಜಯಿಸುವುದು ಅವರೇ. ಎನ್ಡಿಎ, ಯುಪಿಎ, ಎಡ ಮತ್ತು ತೃತಿಯ ರಂಗಗಳೆಂದು ಮೂರ್ನಾಲ್ಕು ಮುಖ್ಯವಾಹಿನಿಯಾಗಿದ್ದ ರಾಜಕೀಯ ಧ್ರುವೀಕರಣ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಬಿಸಿಲ ಬೇಗೆಗೆ ಕರಗುವ ಹಿಮದಂತೆ ರಾಜಕೀಯ ಪಕ್ಷಗಳ ಒಕ್ಕೂಟಗಳು ಸಡಿಲಗೊಳ್ಳುತ್ತಿವೆ. ಒರಿಸ್ಸಾದಲ್ಲಿ ಬಿಜೆಡಿಯು ಬಿಜೆಪಿಯಿಂದ ದೂರ ಹೋದರೆ ಯುಪಿಎಯ ಅಂಗ ಪಕ್ಷಗಳು ನಾವು ನಮ್ಮದೇ ದಾರಿ ನೋಡುತ್ತೇವೆ ಎಂಬಂತೆ ವರ್ತಿಸುತ್ತಿವೆ. ಇಂದು ಇಡೀ ಭಾರತದ ಮಹಾಚುನಾವಣೆಯಲ್ಲಿ ಪ್ರಧಾನಿಯಾಗುವ ಆಕಾಂಕ್ಷಿಗಳು ಒಬ್ಬರಲ್ಲ, ಇಬ್ಬರಲ್ಲ. ಸಂಭವನೀಯ ಪ್ರಧಾನಿಗಳು ಯಾವುದೇ ಒಂದು ಕೂಟದಲ್ಲಿ ಇರಲು ಒಪ್ಪುವುದಿಲ್ಲ. ಅಡ್ವಾಣಿ, ಮನಮೋಹನ್ ಸಿಂಗ್, ಮಾಯಾವತಿ, ಮುಲಾಯಂ ಸಿಂಗ್, ಶರದ್ ಪವಾರ್, ಲಾಲು ಪ್ರಸಾದ್, ರಾಮ ವಿಲಾಸ್ ಪಾಸ್ವಾನ್, ದೇವೇಗೌಡ ಮೊದಲಾದವರು ಚುನಾವಣೆಯ ಪರಿಣಾಮದಲ್ಲಿ ಕಿಂಚಿತ್ ಏರುಪೇರುಗಳಾದರೂ ತಾವು ಪ್ರಧಾನಿಯಾಗಬಲ್ಲೆ ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ತಮ್ಮ ತಮ್ಮ ದಾಳಗಳನ್ನು ಪಣಕ್ಕಿಡುತ್ತಿದ್ದಾರೆ.
ಈ ಬೆಳವಣಿಗೆಯಿಂದ ಮಾಧ್ಯಮಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವ ಪರಿಣಿತರಿಗೆ ದಿಕ್ಕು ಕೆಟ್ಟಂತಾಗಿದೆ. ಮಹಾನ್ ಸಂಪಾದಕರುಗಳು ರಾಜಕೀಯ ಬೆಳವಣಿಗೆಗಳಿಂದ ಗಾಬರಿಯಾದಂತಿದೆ. ನಿಷ್ಟುರವಾದ ಸಂಪಾದಕೀಯಗಳು, ಓದುಗರಿಗೆ ಸ್ಪಷ್ಟದಿಶೆಯನ್ನು ನೀಡುವ ಅಗ್ರಲೇಖನಗಳು, ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾದ ರಾಜಕೀಯ ಅಭಿಪ್ರಾಯಗಳನ್ನು ಮೂಡಿಸುವ ಅಂಕಣಬರಹಗಳು ವೃತ್ತ ಪತ್ರಿಕೆಗಳ ಪುಟಗಳಿಂದ ಬಹಳ ದೂರ ಹೋಗಿವೆ. ಮಾಧ್ಯಮ ಉದ್ಯಮವಾಗಿ ಮತ್ತು ತಾಂತ್ರಿಕವಾಗಿ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಆದರೆ ವೃತ್ತಿನಿಷ್ಟತೆ ಮತ್ತು ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭವಾಗಿ ಇರಬೇಕಾದ ಮಾಧ್ಯಮ ಕುಸಿಯುತ್ತಿದೆ. ಸಂವಹನದ ವಿದ್ಯಾರ್ಥಿಯಾಗಿ ಒಳಗೊಳಗೆ ನಾನು ನೊಂದುಕೊಳ್ಳುತ್ತಿದ್ದೇನೆ. ಜಯ್ ಹೋ...
Wednesday, March 18, 2009
ಜಾಗತೀಕ ನಿದ್ರಾ ದಿನ.

ಎಲ್ಲದಕ್ಕೂ ಒಂದು ದಿನ ಇದ್ದಂತೆ ನಿದ್ದೆಗೂ ಒಂದು ದಿನ ಇದೆ. ಜಾಗತೀಕ ನಿದ್ರಾ ದಿನ. ಮಾರ್ಚ್ 20ರಂದು. ಅದು ಒಂದು ಮಟ್ಟಿಗೆ ನಿದ್ರಾ ರಾತ್ರಿ ಆಗಬೇಕಿದೆ. ಯಾಕೆಂದರೆ ಹಗಲಲ್ಲಿ ನಿದ್ದೆ ಬರುವುದಿಲ್ಲವಲ್ಲ. ಕೆಲವರಿಗೆ ಅದು ಮಾರ್ಚ್ 20 ಮತ್ತು 21 ಎರಡೂ ದಿನವಿರುತ್ತದೆ. ಕಾರಣ ಜಾಗತೀಕ ನಿದ್ರಾ ದಿನದ ದಿವಸ ಮಲಗಿದವರು ಮರುದಿನವೂ ಏಳದೆ ಎರಡೂ ದಿನ ನಿದ್ರಾದಿನವನ್ನು ಆಚರಿಸುತ್ತಾರೆ.
ಪ್ರತಿ ದಿನಾಚರಣೆಗೂ ಒಂದು ಥೀಮ್ ಇದ್ದಂತೆ ಈ ವರ್ಷದ ನಿದ್ದೆಯ ದಿನಾಚರಣೆಗೆ ಜಾಗ್ರತೆಯಾಗಿ ಗಾಡಿ ಚಲಾ
ನಾನೂ ಈ ಬರಹವನ್ನು ಆದಷ್ಟು ಬೇಗ ಮುಗಿಸಿ ಜಾಗತೀಕ ನಿದ್ರಾ ದಿನವನ್ನು ಆಚರಿಸಲು ಹೋಗುತ್ತೇನೆ. ಮುಂದಿನ ಬರಹದವರೆಗೆ ನಾನೂ ಬ್ಲಾಗ್ ಲೋಕದವರ ಮಟ್ಟಿಗೆ ನಿದ್ರಾದಿನವನ್ನೇ ಆಚರಿಸುತ್ತಿದ್ದೇನೆ. ಇನ್ನೂ ಬ್ಲಾಗ್ ತೆರೆದು ಒಂದೆರಡು ಬರಹ ಹಾಕಿ ವರ್ಷವಿಡೀ ನಿದ್ರಿಸಿರುವ ಬ್ಲಾಗಿಗರು ಈ ಜಾಗತೀಕ ನಿದ್ರಾ ದಿನದ ಮೇಲಾದರೂ ಏಳಲಿ ಎಂದು ಆಶಿಸುವೆ.